ವಿತ್ತ ಕೊರತೆಯಿದ್ದರೆ ವೆಚ್ಚಕ್ಕೆ ಕಡಿವಾಣ ಹಾಕಿ!
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ.5.6ರಷ್ಟು ವಿತ್ತೀಯ ಕೊರತೆ ಎದುರಾಗಲಿದೆ ಅಂದಿದ್ದಾರೆ ಪ್ರಧಾನಮಂತ್ರಿಯ ಆರ್ಥಿಕ ಸಲಹೆಗಾರ ಎಂ.ಗೋವಿಂದ ರಾವ್. ಅಂದರೆ ಕೇಂದ್ರ ಸರ್ಕಾರದ ಬಜೆಟಿನ ಶೇ.1ರಷ್ಟು ಹೆಚ್ಚು ಆರ್ಥಿಕ ಕೊರತೆಯನ್ನು ನಾವು ಎದುರಿಸಬೇಕಾಗುತ್ತದೆ. ಭಾರತ ಇಂದು ಆರ್ಥಿಕ ಕೊರತೆಯ ಸಂಕಷ್ಟದ ಸುಳಿಯಲ್ಲಿ ನಲುಗುತ್ತಿರುವುದು ಏಕೆಂದು ಚಿಂತಿಸುತ್ತಾ ಹೋದರೆ ಕಾರಣಗಳ ನೂರಾರು ಪುಟಗಳು ತೆರದುಕೊಳ್ಳುತ್ತವೆ. ಮೂಗಿಗಿಂತ ಮೂಗುತಿ ಭಾರ ಎಂಬ ಗಾದೆ ಮಾತು ನಮ್ಮ ವಿತ್ತೀಯ ಕೊರತೆಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಅದು ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರಗಳೇ ಇರಲಿ, ಬಜೆಟ್ ಮಂಡಿಸುವ ಸಂದರ್ಭದಲ್ಲಿ ಅವರ ಕಣ್ಣ ಮುಂದಿರುವುದು ಓಲೈಕೆ ರಾಜಕಾರಣ. ಯಾವ ಮತದಾರನನ್ನು ಹೇಗೆ ಓಲೈಸುವುದು ಎಂಬ ಲೆಕ್ಕಾಚಾರದಲ್ಲೇ ನಮ್ಮ ವಿತ್ತ ಮಂತ್ರಿಗಳು ಬಜೆಟ್ ಸಿದ್ಧಪಡಿಸಿದರೆ ಸಿದ್ಧಗೊಳ್ಳುವ ಬಜೆಟಿನ ಗಾತ್ರ ಹಿರಿದಾಗುತ್ತಾ ಹೋಗುತ್ತದೆಯೇ ಹೊರತು ಕಿರಿದಾಗುವುದಿಲ್ಲ. ಪ್ರತಿಯೊಂದು ಸರ್ಕಾರವೂ ತನ್ನ ಮೊದಲಿನ ಸರ್ಕಾರಕ್ಕಿಂತ ದೊಡ್ಡ ಬಜೆಟ್ ಮಂಡಿಸಿದ ಕೀರ್ತಿಯನ್ನು ಪಡೆಯಬೇಕು ಎಂಬ ಭ್ರಮಾಸಾಗರದಲ್ಲಿ ತೇಲಾಡುತ್ತಿರುವುದು ಕೂಡಾ ಬಜೆಟಿನ ಗಾತ್ರ ಹಿರಿದಾಗುವುದಕ್ಕೆ ಕಾರಣವಾಗಿದೆ. ಬಜೆಟ್ ಹಿರಿದಾರೆ ಸಮಸ್ಯೆಯೇನು? ವಿವಿಧ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದಾದರೆ ದೊಡ್ಡ ಬಜೆಟ್ ಬೇಕಲ್ಲವೇ? ಎಂಬೆಲ್ಲ ಪ್ರಶ್ನೆಗಳು ಕಾಡಬ