ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ


'ಅಮೆರಿಕದ ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯ ಜನರಿಗೆ ವೆಚ್ಚ ಕಡಿತ ಮಾಡುವುದಕ್ಕೆ ಹೇಳಿರುವಂಥ ಸಂದರ್ಭದಲ್ಲಿ ಬ್ಯಾಂಕರ್ ಗಳಿಗೆ, ಕಾರ್ಪೊರೇಟ್ ಗಳಿಗೆ ಲಕ್ಷಾಂತರ ಡಾಲರ್ ನೆರವು ಸಿಗುತ್ತಿರುವ ಕಾರಣದಿಂದಾಗಿ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವ ಭೀತಿಯಿದೆ. ಐರೋಪ್ಯ ರಾಷ್ಟ್ರಗಳಲ್ಲಿಯೂ ಇದೇ ಆತಂಕವಿದೆ. ಈ ಪ್ರತಿಭಟನೆ ನಿಲ್ಲಬೇಕು ಮತ್ತು ಸಮಸ್ಯೆ ನಿವಾರಣೆಯಾಗಬೇಕು ಎಂದಾದರೆ ವಿಶ್ವಾಸಾರ್ಹವಾದ, ಸದೃಢವಾದ ವ್ಯವಸ್ಥೆಯೊಂದರ ಅಗತ್ಯವಿದೆ....'

ಇದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಮೆರಿಕದಲ್ಲಿನ ಪ್ರತಿಭಟನೆಯ ಬಗ್ಗೆ ಕೊಟ್ಟಂಥ ಪ್ರತಿಕ್ರಿಯೆ. ಈ ಮಾತಿನಲ್ಲಿ ವಾಸ್ತವಾಂಶವಿದೆ  ಜೊತೆಗೆ ಒಂದು ರೀತಿಯ ನಿರ್ಲಕ್ಷ್ಯವಿದೆ. ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿದ್ದಾರೆ. ವಿವಿಧ ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೊರೇಟ್ ಗಳ ಮೇಲೆ, ಅವುಗಳಿಗೆ ಪ್ರೋತ್ಸಾಹ ಕೊಡುತ್ತಿರುವಂಥ ಸರಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಕ್ತ ಆರ್ಥಿಕತೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ನಿಜ, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ನಿರುದ್ಯೋಗದ ಭೀತಿಯಿದೆ. ಸಿಂಗ್ ಅವರ ಈ ಮಾತು ನಿಜ. ಆದರೆ ಭಾರತದ ದೃಷ್ಟಿಯಲ್ಲಿ ಅವರೇನೂ ಚಿಂತನೆ ನಡೆಸಿದಂತಿಲ್ಲ.

ಭಾರತಕ್ಕೆ ಕಾಲಿಟ್ಟಿದೆ
 ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ಕಾಣಿಸಿಕೊಂಡಿದ್ದ ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಆಂದೋಲನ ಭಾರತದಲ್ಲಿಯೂ ಪ್ರತಿಧ್ವನಿಸುವುದಕ್ಕೆ ಶುರುವಾಗಿದೆ. ಇದರ ಮೊದಲ ಹಂತವಾಗಿ ಮುಂಬೈನ ದಾದರ್ ರೇಲ್ವೆ ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ಯುವಕರು ಮತ್ತು ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಿಯಂತ್ರಣ ಇಲ್ಲದಂತಹ ಆರ್ಥಿಕ ಉದಾರೀಕರಣ, ಮುಕ್ತ ಆರ್ಥಿಕ ನೀತಿಗಳು ಜಗತ್ತಿನೆಲ್ಲೆಡೆ ಸಮಸ್ಯೆಯಾಗಿವೆ.

  ಪಾಶ್ಚಾತ್ಯ ದೇಶಗಳು ಯಾವೆಲ್ಲ ಸಮಸ್ಯೆಗಳು ಎದುರಿಸುತ್ತಿವೆಯೋ ಅಂಥದ್ದೇ ಸಮಸ್ಯೆಗಳನ್ನು ಭಾರತವೂ ಸಹ ಎದುರಿಸುತ್ತಿದೆ. ಆರ್ಥಿಕ ನೀತಿಗಳು ಜನಸಾಮಾನ್ಯರ ಬದುಕನ್ನು ಭದ್ರಪಡಿಸುವಂತಿರಬೇಕು ಎಂದು ಪ್ರತಿಭಟನಕಾರರು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಈ ಆಂದೋಲನ ಜಗತ್ತಿನಲ್ಲಿಡೀ ವ್ಯಾಪಿಸುತ್ತಿರುವುದು ಮತ್ತು ಭಾರತದಲ್ಲಿನ ಭ್ರಷ್ಟಾಚಾರದ ವಿರುದ್ಧದ ಸಮರದಿಂದಾಗಿ ಜನರು ಆರ್ಥಿಕ ಸಂಕಷ್ಟದ ಬಗ್ಗೆ ಜಾಗೃತಗೊಳ್ಳುತ್ತಿರುವುದರಿಂದ ಈ ಪ್ರತಿಭಟನೆ ಭಾರತದಾದ್ಯಂತವೂ ಮುಂದುವರಿಯುವುದು ಖಂಡಿತ.

ಭಾರತಕ್ಕೆ ಹೇಗೆ ಸಮಸ್ಯೆ?
ಪ್ರಸ್ತುತ ಭಾರತದ ಶೇ.50ರಷ್ಟು ಆರ್ಥಿಕತೆ ಬಹುರಾಷ್ಟ್ರೀಯ ಮಾರುಕಟ್ಟೆಯನ್ನು ನೆಚ್ಚಿಕೊಂಡಿದೆ. ಜೊತೆಗೆ ಇಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಅದಾಯವೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆಯೇ ಅವಲಂಬಿತ. ಒಂದುವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆ ತಲ್ಲಣಗೊಂಡರೆ ಅದರ ಪರಿಣಾಮ ನಮ್ಮಲ್ಲಿನ ಉದ್ಯೋಗಿಗಳ ಮೇಲಾಗುತ್ತದೆ. ಆರ್ಥಿಕತೆಯ ಮೇಲಾಗುತ್ತದೆ. 2008ರಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗಲೇ ಸಾವಿರಾರು ಭಾರತೀಯ ನೌಕರರು ತಮ್ಮ ನೌಕರಿ ಕಳೆದುಕೊಂಡಿದ್ದರು. ನಂತರ ಐಟಿ ಉದ್ಯೋಗಿಗಳ ವೇತನವೂ ಬಹುಪಟ್ಟು ಕಡಿಮೆಯಾಗಿತ್ತು.

ಪ್ರಸ್ತುತ ಉಂಟಾಗಿರುವ ಆರ್ಥಿಕ ಹಿಂಜರಿತದ ಪರಿಣಾಮದಿಂದಾಗಿ ಈಗಾಲೇ ಕೆಲವು ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಐಬಿಎಂ ಒಂದರಲ್ಲಿಯೇ 1000ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಪರಿಸ್ಥಿತಿ ಹೀಗಿರುವಾಗ, ಇಂಥ ಪರಿಸ್ಥಿತಿಯನ್ನು ಉಂಟುಮಾಡಿರುವ ಆರ್ಥಿಕ ನೀತಿಯ ವಿರುದ್ಧ ಸಹಜವಾಗಿಯೇ ಆಕ್ರೋಶ ಉಂಟಾಗುತ್ತದೆ. ಹೀಗಾಗಿ ಪ್ರಸ್ತುತ ಮುಂಬೈಗೆ ಕಾಲಿಟ್ಟಿರುವ ಪ್ರತಿಭಟನೆ ಭಾರತದಾದ್ಯಂತ ಹರಡುವ ದಿನ ದೂರ ಇಲ್ಲ. ನಮ್ಮಲ್ಲೂ ಆರ್ಥಿಕ ನಿತಿಯನ್ನು ಪುನಶ್ಚೇತನಗೊಳಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಕಡಿಮೆ ಅವಲಂಬಿಸುವಂಥ ನೀತಿಗಳನ್ನು ರೂಪಿಸಲೇಬೇಕಾದ ಅನಿವಾರ್ಯತೆ ಖಂಡಿತಕ್ಕೂ ಎದುರಾಗಿದೆ.

Comments

Popular posts from this blog

ಜ್ಞಾನೋದಯ (?)

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

ಕಳೆದ ಬಾಲ್ಯವ ನೆನೆದು