ಜನರಿಗೆ ಧ್ವನಿಯಾಗುವ ನಮ್ಮ ನೋವು ಯಾರಿಗೂ ಕೇಳಿಸದೆ?
ಜೀವದ ಬೆಲೆ ಏನು ಎಂಬುದನ್ನು ಪ್ರತಿಕ್ಷಣವೂ ಕಣ್ಣಾರೆ ಕಾಣುತ್ತಿದ್ದರೂ, ಜೀವದ ಹಂಗನ್ನು ಬಿಟ್ಟವರು ನಾವು. ಸಾವಿನ ಘೋರ ದೃಶ್ಯಗಳು, ಬರ್ಬರ ಹತ್ಯೆಯ ಕ್ಷಣಗಳು ಮಾನವ ಸಹಜವಾಗಿಯೇ ವಿವಿಧ ಭಾವನೆಗಳ ತಲ್ಲಣವನ್ನು ನಮ್ಮೆದೆಯಲ್ಲಿ ಎಬ್ಬಿಸಿದರೂ ಅವುಗಳ ಕಡೆಗೊಂದು ನಿರ್ಲಿಪ್ತ ದೃಷ್ಟಿಯನ್ನು ಬೀರಿ 'ವೃತ್ತಿಃ ಪರಮೋಧರ್ಮಃ' ಎಂಬ ತತ್ತ್ವಕ್ಕೆ ಬದ್ಧರಾಗಿ ಕೆಲಸ ಮಾಡುವವರು. ಇಷ್ಟು ವಿವರಣೆ ಕೊಡುವಾಗಲೇ ನಾವು ಪತ್ರಕರ್ತರು ಎಂಬುದು ಗೊತ್ತಾಗಿರಬಹುದು. ಜೀವನವೇ ಹಾಗೆ. ಅದು ಎಳೆದುಕೊಂಡು ಹೋದತ್ತ ಸಾಗುವುದಷ್ಟೇ ಜೀವಿಗಳಿಂದ ಸಾಧ್ಯ. ಆದರೆ ಅದೆಷ್ಟೋ ಬಾರಿ ನಾವು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗುತ್ತದೆ. ತಾನು ಹೋಗೆನೆಂಬ ಹಠಮಾರಿ ಭಾವವನ್ನು ಹೊಮ್ಮಿಸುವ ಜೀವನವನ್ನು ನಮಗೆ ಬೇಕಾದ ದಿಕ್ಕಿನತ್ತ ಸೆಳೆದುಕೊಳ್ಳಬೇಕಾಗುತ್ತದೆ. ಸಾಮಾನ್ಯ ಸಮಾರಂಭಗಳಲ್ಲಿ ಭಾಗವಹಿಸಿ ವರದಿ ಮಾಡುವಾಗ ಇರುವ ನೆಮ್ಮದಿ, ಅಪರಾಧ ಜಗತ್ತಿನ ಬಗ್ಗೆ, ಯುದ್ಧದ ಕ್ಷಣಗಳ ಬಗ್ಗೆ ವರದಿ ಮಾಡುವಾಗ ಅದೆಷ್ಟೋ ದೂರಕ್ಕೆ ಓಡಿ ಹೋಗಿರುತ್ತದೆ. ಟಿವಿ ಮಾಧ್ಯಮಗಳ ಪ್ರಭಾವದಿಂದಾಗಿ 'ನಾ ಮೊದಲು ವರದಿ ಮಾಡಬೇಕು, ಬ್ರೇಕಿಂಗ್ ನ್ಯೂಸ್ ನಾನೇ ಕೊಡಬೇಕು' ಎಂಬ ಧಾವಂತ ಮುದ್ರಣ ಮಾಧ್ಯಮಗಳಲ್ಲಿ ಕೊಂಚ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗಂತ ಅದೆಷ್ಟೋ ಬಾರಿ ಟಿವಿ ಮಾಧ್ಯಮಗಳಿಗಿಂತ ವೇಗವಾಗಿ, ಅವುಗಳಿಗೆ ಸಿಗದ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದ ದಾಖಲ